Wednesday, May 25, 2016

ಕೇರಳದ ಕೆಸರಲ್ಲಿ ಹುಟ್ಟಿದ ಕಮಲದ ಮೊಗ್ಗು


          
                  ಅಂತೂ - ಇಂತೂ ದೇವರ ನಾಡಲ್ಲಿ ಕಮಲವೊಂದು ಅರಳಿದೆ .ಅದು 30-40 ವರ್ಷಗಳ ಪ್ರಯತ್ನದ  ನಂತರ ,ಬಿ.ಜೆ.ಪಿ ಅಭ್ಯರ್ಥಿ  A.O ರಾಜಗೋಪಾಲ್  ನೆಮಂ ಕ್ಷೇತ್ರದಿಂದ ವಿಜೇತರಾಗಿ ಕೇರಳ  ರಾಜ್ಯ ವಿಧಾನಸಭೆಯಲ್ಲಿ ಬಿ.ಜೆ.ಪಿ ಖಾತೆ ತೆರೆದಿದ್ದಾರೆ . ಅಲ್ಲಿಗೆ ಲಕ್ಷಾಂತರ ಕಾರ್ಯಕರ್ತರ ಹಗಲಿರುಳಿನ ಶ್ರಮಕ್ಕೊಂದು ಅರ್ಥ ಬಂದಿದೆ.

                   ಇದನೆಲ್ಲಾ ನೋಡುತ್ತಿರುವಾಗ 80-90ನೇ ದಶಕದ ಕರ್ನಾಟಕದ ಬಿ.ಜೆ.ಪಿ ಸ್ಥಿತಿ-ಗತಿ ಅರಿವಾಗುತ್ತದೆ. ಆ ಸಮಯದಲ್ಲಿ ಬಿ.ಜೆ.ಪಿಗೆ ದೇಶದಲ್ಲಿ ಅಡಿಪಾಯ ಇರಲಿಲ್ಲ. ಇಂದು ಕೇರಳದಲ್ಲಿ ಒಂದೇ ಒಂದು ಸೀಟ್ ಗೆದ್ದರು ಹೇಗೆ ಹೆಮ್ಮೆಯಿಂದ ಬೀಗುತಿದೆಯೋ, ಅದೇ ರೀತಿಯ ಹಂಬಲ ಇಲ್ಲಿನ ಬಿ.ಜೆ.ಪಿಯ ಕಾರ್ಯಕರ್ತರಲ್ಲಿಯೂ ಇತ್ತು .ತಮ್ಮ ಕೆಲಸ -ಕಾರ್ಯಗಳನ್ನು ಬಿಟ್ಟು ಕೈಯಿಂದ ಹಣ ಖರ್ಚು ಮಾಡಿ ಸಂತೋಷ ಪಡುತ್ತಿದ್ದರು , ರಾಜ್ಯದಲ್ಲಿ ರಾಮ ಭಟ್ ಉರಿಯಮಜಲು (ಕರಾವಳಿ ಕರ್ನಾಟಕದಲ್ಲಿ ಬಿ.ಜೆ.ಪಿ ಯ ಬೆಳವಣಿಗೆಗೆ ಇವರ ಕೊಡುಗೆ ದೊಡ್ಡದು ),ಬಿ. ಶಿವಪ್ಪ ,ಯಡಿಯೂರಪ್ಪ ಮೊದಲಾದವರ ನಾಯಕತ್ವದಲ್ಲಿ ಬೇರೂರಲು ಪಕ್ಷ ಪ್ರಯತ್ನಿಸುತ್ತಿತ್ತು ,ಆದರೆ  ಮುಂದೆ ನಡೆದದ್ದು ಇತಿಹಾಸ .

                   ಇನ್ನು ಕೇರಳದ ರಾಜ್ಯಕೀಯದ ವಿಚಾರಕ್ಕೆ ಬರುವುದಾದರೆ ಅಲ್ಲಿ ರಾಷ್ಟೀಯ ಪಕ್ಷಗಳಿಗೆ ಭದ್ರವಾದ ನೆಲೆಯಿಲ್ಲ .CPI - CPI(M) , ಜೆ.ಡಿ.ಎಸ್  ಮೊದಲಾದ ಎಡಪಕ್ಷಗಳು ಸೇರಿ L.D.F (Left Democratic Front)  ಎಂಬ ಒಕ್ಕೂಟ ರಚಿಸಿಕೊಂಡರೆ ಕಾಂಗ್ರೆಸ್, ಕೇರಳ ಕಾಂಗ್ರೆಸ್ ,ಮುಸ್ಲಿಂ ಲೀಗ್ ಮೊದಲಾದವು ಜೊತೆಗೂಡಿ U.D.F (United Democratic Front) ಎಂಬ ಒಕ್ಕೂಟ ರಚಿಸಿಕೊಂಡಿವೆ . ಈ ಎರಡು ಒಕ್ಕೂಟಗಳು ಆವರ್ತನ ರೀತಿಯಲ್ಲಿ ಅಧಿಕಾರಕ್ಕೆ ಬರುವುದು ಸಾಮಾನ್ಯ ವಾಡಿಕೆ . ಕಳೆದ ಬಾರಿ ಉಮ್ಮನ್ ಚಾಂಡಿ ನೇತೃತ್ವದ U.D.F ಅಧಿಕಾರಕ್ಕೆ ಬಂದಿತು . ಅವರ  ಅಧಿಕಾರದ ಅವಧಿಯಲ್ಲಿ ನಡೆದ ಸೋಲಾರ್ ಹಗರಣ,  ಮದ್ಯ ಹಗರಣ ಮೊದಲಾದವು ಹಾಗು 5 ವರ್ಷಗಳ ಆವರ್ತನ ಪದ್ಧತಿ ಈ ಬಾರಿ ಕೇವಲ 47 ಸೀಟ್ ಸಿಕ್ಕಿ ಮುಖಭಂಗ ಅನುಭವಿಸುವಂತೆ ಮಾಡಿದೆ . L.D.F ಹಿರಿಯ ನೇತಾರ , ಮಾಜಿ ಮುಖ್ಯಮಂತ್ರಿ V.S ಅಚ್ಚುತನಂದನ್ ಹಾಗು ಪಕ್ಷದ ಕಾರ್ಯದರ್ಶಿ ಪಿನರಾಯಿ ವಿಜಯನ್ ನೇತೃತ್ವದ  L. D. F , ಒಟ್ಟು 140ಕ್ಷೇತ್ರಕ್ಕೆ  91 ರಲ್ಲಿ ಗೆದ್ದು ಅಧಿಕಾರಕ್ಕೆ ಏರಿದೆ .ಸಾಮಾನ್ಯ ವಾಗಿ ಸಾಂಪ್ರದಾಯಿಕ ಮತದಾರರನ್ನು ಹೊಂದಿರುವ ಈ ಪಕ್ಷಗಳು ಕರಾವಳಿ ತೀರದ ರಾಜ್ಯದಲ್ಲಿ ಚಾಲ್ತಿಯಲ್ಲಿವೆ .

                   ಕೇರಳ ಒಂದು ಸಣ್ಣ ರಾಜ್ಯ , 20 ಲೋಕಸಭಾ ಹಾಗು 140 ವಿಧಾನಸಭಾ ಕ್ಷೇತ್ರವನ್ನು ಹೊಂದಿದೆ .ಇಲ್ಲಿ ಕಾಸರಗೋಡು ಹಾಗು  ತಿರುವನಂತಪುರಂನಲ್ಲಿ ಪಕ್ಷ ಸ್ವಲ್ಪ ಪ್ರಾಬಲ್ಯ ಹೊಂದಿದೆ . ಉಳಿದೆಡೆಯಲ್ಲಿ ತನ್ನ ಅಸ್ತಿತ್ವ ಹುಡುಕಲು ಪ್ರಯತ್ನ ನಡೆಸುತ್ತಿದೆ . ಎಡಪಕ್ಷಗಳ ಗೂಂಡಗಿರಿಯಿಂದ ತನ್ನ ಹಲವಾರು ಕಾರ್ಯಕರ್ತರನ್ನು ಹಾಗು ಯುವ ಮೋರ್ಚ ರಾಜ್ಯ ಉಪಾದ್ಯಕ್ಷ ಜಯಕೃಷ್ಣ ಮಾಸ್ಟರ್ ಮೊದಲಾದ ನಾಯಕರನ್ನು ಈಗಾಗಲೇ ಕಳೆದುಕೊಂಡಿದೆ . (ಜಯಕೃಷ್ಣ ಮಾಸ್ಟರ್ :- ಇವರನ್ನು 1999 ರ ಡಿಸೆಂಬರ್ 31 ಅಂದರೆ ಹೊಸ ಶತಮಾನಕ್ಕೆ ಒಂದು ದಿನ ಮೊದಲು ವಿದ್ಯಾರ್ಥಿಗಳ ಎದುರೆ ಶಾಲೆಯಲ್ಲಿ ಹತ್ಯೆ ಮಾಡಲಾಯಿತು ). ಈಗ ಕಮ್ಯುನಿಸ್ಟ್  ನಾಯಕ ಮುಖ್ಯಮತ್ರಿ ಪಿನರಾಯಿ ವಿಜಯನ್ ಪ್ರಾಬಲ್ಯದ  ಕಣ್ಣೂರಿನಲ್ಲಿ ಕಚ್ಚಾಬಾಂಬ್ ಸ್ಪೋಟವಾದ ಹಾಗು ವಿರೋಧಿ ಪಕ್ಷಗಳ ನಾಯಕರ ಮನೆಯಲ್ಲಿ ಧಾಂಧಲೆ ಎಬ್ಬಿಸಿದ ವರದಿಗಳು ಬಂದಿವೆ ಅಲ್ಲದೆ  ೩ ಕಾರ್ಯಕರ್ತರ  ಹತ್ಯೆಯಾಗಿದೆ.  ಈ ಕುರಿತು ಬಿ.ಜೆ.ಪಿ ಮುಖಂಡರು ರಾಷ್ಟ್ರಪತಿಗೆ ದೂರು ಸಲ್ಲಿಸಿದ್ದಾರೆ . ಹೀಗೆ ಇಡೀ  ಕೇರಳವನ್ನು ಅವರಿಸಿರುವ ಕೆಂಪು ಉಗ್ರವಾದಕ್ಕೆ ಸೆಡ್ಡು ಹೊಡೆದು ಪಕ್ಷ ಕಟ್ಟುವುದು ಸುಲಭದ ಮಾತಲ್ಲ . (ಕರ್ನಾಟಕದಲ್ಲಿ ಪಕ್ಷ ಕಟ್ಟುವ ಕೆಲಸ ಇಷ್ಟು  ಬಿ.ಜೆ.ಪಿಗೆ ಹಿಂಸಾತ್ಮಕವಾಗಿರಲಿಲ್ಲ .) ಇದು ಕೇರಳದಲ್ಲಿ ಬಿ.ಜೆ.ಪಿ ಇನ್ನು ನೆಲೆ ಕಾಣದಿರಲು ಕಾರಣ .

              ಇಂಥ ಸಂದರ್ಭದಲ್ಲಿಯೂ  ಬಿ.ಜೆ.ಪಿಗೆ ಅಲ್ಲಿ ಒಂದು ಆಶಾವಾದ ಮೂಡಿದೆ , ನೆಮಂ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ ಹಿರಿಯ ನಾಯಕ ರಾಜಗೋಪಾಲ್ ತಮ್ಮ ಸಮೀಪದ ಪ್ರತಿಸ್ಪರ್ಧಿ L.D.F ನ V. ಶಿವಕುಟ್ಟಿ ಅವರನ್ನು 8671 ಮತಗಳಿಂದ ಸೋಲಿಸಿ ಅಚ್ಚರಿ ತಂದಿದ್ದಾರೆ .87 ವರ್ಷದ ಈ ಹಿರಿಯ ನೇತಾರ ಕೇಂದ್ರದ ವಾಜಪೇಯಿ ಸರ್ಕಾರದಲ್ಲಿ ಮಂತ್ರಿಯಾಗಿದ್ದರು .1929 ರ ಸೆಪ್ಟೆಂಬರ್ 15 ರಂದು ಪಾಲಕ್ಕಾಡ್ ನಲ್ಲಿ ಜನಿಸಿದ ಇವರು ಕಾನೂನು ವ್ಯಾಸಂಗ ಮಾಡಿದ್ದಾರೆ .1992 ಹಾಗು 1998 ರಲ್ಲಿ 2 ಬಾರಿ ಮದ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ . ಕೇಂದ್ರದಲ್ಲಿ ರಕ್ಷಣೆ , ಸಂಸದೀಯ ವ್ಯವಹಾರ , ಕಂಪನಿ ವ್ಯವಹಾರ , ರೈಲ್ವೆ , ಕಾನೂನು, ಗ್ರಾಮೀಣಭಿವೃದ್ದಿ  ಖಾತೆಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ . ಆದರೆ ಇವರು ಕೇರಳದಲ್ಲಿ ಪಕ್ಷ ಕಟ್ಟಲು ನಡೆಸಿದ ಹೋರಾಟ ಮಾತ್ರ ಅಮೆರಿಕಾದ ಮಾಜಿ ಅಧ್ಯಕ್ಷ ಲಿಂಕನ್ ನಂತೆ ಬರೀ ಸೋಲಿನಿಂದಲೇ ಕೂಡಿದ್ದೆ. 1980ರಲ್ಲಿ ಕಾಸರಗೋಡು ಲೋಕಸಭೆ ಕ್ಷೇತ್ರದಿಂದ ಮೊದಲ್ಗೊಂಡು 1989 ಮಂಜೆರಿ ,1991 ಮತ್ತು 1999, 2004 ಹಾಗು 2014 ತಿರುವನಂತಪುರಂ ಲೋಕಸಭೆ ಕ್ಷೇತ್ರ ದಲ್ಲಿ ಸ್ಫಧಿಸಿ ಸೋಲನ್ನು ಕಂಡಿದ್ದಾರೆ .ಹಾಗು 2013 ಮತ್ತು 2015 ರ ವಿಧಾನಸಭಾ ಉಪಚುನಾವಣೆಯಲ್ಲಿ ಕೂಡ ಸೋತಿದ್ದರು .ಅದರಲ್ಲಿಯೂ 2014 ರ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರಂ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಗೆ ನೆಕ್ ಟು ನೆಕ್ ಸ್ಪರ್ಧೆಯೊಡ್ಡಿ 15000 ಮತಗಳ ಅಂತರದಿಂದ ಸೋತಿದ್ದರು .

                 ಉಳಿದಂತೆ 2014ರಲ್ಲಿ ಮೋದಿ ಅಲೆ ಇತ್ತು , ಇದರಿಂದಾಗಿ ಕಾಸರಗೋಡು ಹಾಗು ತಿರುವನಂತಪುರಂ ಲೋಕಸಭೆ ಕ್ಷೇತ್ರಗಳಲ್ಲಿ ಬಿ.ಜೆ.ಪಿ 2ನೆ ಸ್ಥಾನ ಗಳಿಸಿತ್ತು. ಈಗ ಅದೇ ಕಾಸರಗೋಡ್ ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ ಅಭ್ಯರ್ಥಿ K.ಸುರೇಂದ್ರನ್ ಕೇವಲ 89 ಮತಗಳಿಂದ ಪರಾಭವಗೊಂಡಿದ್ದಾರೆ .ಅಲ್ಲದೆ ರಾಜ್ಯದ 7 ಕಡೆಗಳಲ್ಲಿ 2ನೆ ಸ್ಥಾನದಲ್ಲಿ ಇದ್ದಾರೆ ,3ಕಡೆ 3ನೆ ಸ್ಥಾನ ಹಾಗು ಚಲಾವಣೆಗೊಂಡ ಮತಗಳಲ್ಲಿ ಶೇಕಡಾ 14 ರಷ್ಟು ಮತಗಳನ್ನುN.D.A ಅಭ್ಯರ್ಥಿಗಳು ಪಡೆದು ಕೊಂಡಿದ್ದಾರೆ. ಅತಿ ಬುದ್ದಿವಂತ ಹಾಗು ಸಾಕ್ಷರರನ್ನು ಹೊಂದಿರುವ ಕೇರಳದಲ್ಲಿ ಇದು ಸಾಧನೆಯೇ ಸರಿ .

              ಒಟ್ಟಾರೆಯಾಗಿ ಗಮನಿಸುವುದ್ದದಾರೇ ಮೋದಿಯ "ಸೋಮಾಲಿಯ ಮಾದರಿ"   ಹೇಳಿಕೆ ಈ ಚುನಾವಣೆಯಲ್ಲಿ ಪರಿಣಾಮ ಬೀರಿಲ್ಲ. ಕರ್ನಾಟಕದಲ್ಲಿ  ಬಿ.ಜೆ.ಪಿ 25 ವರ್ಷಗಳ ಹಿಂದೆ ಇದ್ದ ಸ್ಥಿತಿ ಅಲ್ಲಿ ಈಗ ಇದೆ . ಬಿ.ಜೆ.ಪಿ ಮಾತೃ ಸಂಘಟನೆ ಅರೆಸ್ಸೆಸ್ ಯುವ ಮತದಾರರನ್ನು ಸೆಳೆಯುತ್ತಿದೆ. ಈ ಬಾರಿ ಈಳವ ಸಮಾಜದ ಬೆಂಬಲಿತ ಬಿ.ಡಿ.ಜ಼ೆ.ಎಸ್ ಪಕ್ಷದ ಸಾಥ್ ದೊರೆತಿದೆ. 2 ಪಕ್ಷಗಳ ಆಳ್ವಿಕೆಯಿಂದ ಬೇಸತ್ತಿರುವ ವರ್ಗಕ್ಕೆ ಬಿ.ಜೆ.ಪಿ ಪರ್ಯಾಯ ಶಕ್ತಿಯಂತೆ ಗೋಚರಿಸಲಿದೆ.  ಯಡಿಯೂರಪ್ಪರಂತ ನಾಯಕರ ಚಾಣಕ್ಯ ತಂತ್ರಗಳು ಫಲಿಸಬೇಕಾದರೆ ಇನ್ನೊಂದು 8-10 ವರ್ಷ ಕಾಯಬೇಕು.  ಅಲ್ಲಿಯವರೆಗೆ ಬಿ.ಜೆ.ಪಿ ಬಗ್ಗೆ ಮತದಾರರಲ್ಲಿ ನಂಬಿಕೆ ಇದ್ದರೆ ಗೆಲುವು ಸಾಧ್ಯ. ಅದಕ್ಕೆ ಅಪಾರ ತಾಳ್ಮೆ ಬೇಕು ,ತಂತ್ರಗಾರಿಕೆ ಬೇಕು . ಇಷ್ಟೆಲ್ಲಾ ಸಾಧ್ಯವಾದರೆ ದೇವರಿಗೆ ಕಮಲ ಹತ್ತಿರವಾಗಬಹುದು . 
 
<------------  http://kannada.readoo.in/  ನಲ್ಲಿ ಪ್ರಕಟವಾದ ನನ್ನ ಲೇಖನ ------------>

                                                                                               - Tharanatha Sona

Wednesday, May 4, 2016

ಮೋಡವಾಗಿದೆ ಮನದಲ್ಲಿ
ಭಾವನೆಯ ಹನಿ ತಾಕಿ
ಸುರಿಯುತಿಹುದು ಕಣ್ಣಹನಿ
ಮೆದುವಾಗಿ ಸೋನೆಯಂತೆ

ಗುಡುಗಿದೆ ಕಂಪಿಸಿದೆ ಹೃದಯ
ಭೂಕಂಪದಂತೆ ಲಘುವಾಗಿ
ಸೋಲುತ್ತಿರುವ ಕೈಕಾಲು ಹೇಳಿದೆ
ಇದೆಲ್ಲಾ ನಿನ್ನ ನೆನಪಿಗಾಗಿ

 ಬ್ರಹ್ಮನ ಹಣೆಯ ಬರಹದವಳೇ
ಬೆಳಗಿನ ಕನಸಿನಲ್ಲಿ ಕಾಡಿದವಳೇ
ಮರೆತೋದ ಸೂರ್ಯನಿಂದು ಭೂಮಿಗೆ ಬರಲು
ತಡವೇಕೆ ನಿನಗೆ ಮತ್ತೆ ಬಾಳಿಗೆ ಬರಲು?

                                    -Tharanatha Sona 

Tuesday, April 26, 2016

ಉಕ್ಕಿನ ಮಹಿಳೆ - ಗೋಲ್ಡಾ ಮಿರ್ 

                                        " ನಾನು ಸಮಯವನ್ನು ಆಳುತ್ತೇನೆ ಹೊರತು ಸಮಯ ನನ್ನನಲ್ಲ. "

         ಇಸ್ರೇಲ್ ಎಂದರೆ ತಕ್ಷಣ ನೆನಪಾಗುವುದು ಯುದ್ದ-ಹೋರಾಟ ಅಥವಾ ಅದರ ರಾಷ್ಟ್ರಭಕ್ತಿ.  2000 ವರ್ಷಗಳಿಂದ ತಾಯಿನೆಲೆ ಬಿಟ್ಟು ಅಲೆಮಾರಿಯಾದ ಯಹೂದಿ ಜನಾಂಗ ಇಂದು ನೆಲೆಸಿರುವ ನಾಡು. 20 ಶತಮಾನಗಳು ಅವರಿವರಿಂದ ತುಳಿತಕ್ಕೆ ಒಳಗಾಗಿ ವಿಶ್ವದಾದ್ಯಂತ ಹಂಚಿ ಹೋದ ಜನಾಂಗ ಮತ್ತೆ ಒಂದುಗೂಡಿದ ದೇಶ. ಜರ್ಮನಿ ಸರ್ವಾಧಿಕಾರಿ ಹಿಟ್ಲರನ ವಿಷಾನೀಲಕ್ಕೆ ತಮ್ಮವರನ್ನು ಕಳೆದುಕೊಂಡ ನೋವಲ್ಲಿ ಮತ್ತೆ ದೇಶಕಟ್ಟಿದ ಛಲಗಾರರ ದೇಶ. ಸಿಕ್ಕ ಸ್ವಾತಂತ್ಯವನ್ನು ಉಳಿಸಿಕೊಳ್ಳಲು, ಸುತ್ತ ನೆರೆದಿರುವ ಶತ್ರುಗಳಿಂದ ರಕ್ಷಿಸಿಕೊಳ್ಳಲು ಸದಾ ಎಚ್ಚರಿಕೆಯಿಂದ ಇರುವ ದೇಶ. ಮರುಭೂಮಿಯಲ್ಲಿ ಹಸಿರು ಬೆಳೆದ ಮಾಯಗಾರರ ನಾಡು. ಇಂಥಹ ನಾಡಿನ ಧೀರ ಮಹಿಳೆಯೇ ಗೋಲ್ಡಾ ಮಿರ್. 

         ಗೋಲ್ಡಾ ಮಿರ್ ಇಂದಿನ ಉಕ್ರೇನ್ ದೇಶದಲ್ಲಿರುವ ಕೀವ್ ಪಟ್ಟಣದಲ್ಲಿ ಮೇ 3, 1898ರಲ್ಲಿ ಜನಿಸಿದರು. ತಂದೆ ಮೋಶೆ ಮಬೋವಿಚ್ಚ್ ಒಬ್ಬ ಬಡಗಿ. ಅವರು ನಂತರ ಉದ್ಯೋಗ ಹುಡುಕಿ ಅಮೆರಿಕಕ್ಕೆ ಹೊರಟರು.ಅಮೇರಿಕಾದಲ್ಲಿ ಓದು ಮುಗಿಸಿದ ಗೋಲ್ಡಾ ಕೆಲಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. 1917ರಲ್ಲಿ ಮಾರಿಸ್ ಮೆಯೇರ್ಸೋನ್ ಎನ್ನುವರನ್ನು ಮದುವೆಯಾದರು. 1921ರಲ್ಲಿ ಪ್ಯಾಲೆಸ್ಟೈನ್ನಲ್ಲಿ ನೆಲೆಯಾದರು. ಅಲ್ಲಿ ಕೃಷಿ ಮಾಡಿ ನೆಲೆಸುವುದು ಅವರ ಇಚ್ಛೆಯಾಗಿತ್ತು ಅವರಿಗೆ 2 ಜನ ಮಕ್ಕಳು ಜನಿಸಿದವು. ಇಲ್ಲಿಗೆ ಗೋಲ್ಡಾಳ ಬದುಕಿನ ಒಂದು ಘಟ್ಟ ಮುಗಿದಿತ್ತು. ಮತ್ತೆ ಅಮೆರಿಕಕೆ ಹೋದ ಗೋಲ್ಡಾ ತಮ್ಮ ಬದುಕನ್ನು ಸಾರ್ವಜನಿಕ ಸೇವೆಗೆ ಅರ್ಪಿಸಿದರು. ಮೊದಲಿಗೆ ಪ್ಯಾಲೆಸ್ಟೈನ್ ನಲ್ಲಿ ಯಹೂದಿಗಳ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದರು.

          ಬದಲಾದ ಸನ್ನಿವೇಶದಲ್ಲಿ ಹಿಟ್ಲರನ ಕಿರುಕುಳಕ್ಕೆ ನಲುಗಿದ ಯಹುದಿಗಳಿಗೆ ಅಮೇರಿಕಾ ದೇಶ ಕಟ್ಟುವ ಭರವಸೆ ನೀಡಿತು. 1946ರಲ್ಲಿ ಗೋಲ್ಡಾ ಯಹೂದಿ ಹೋರಾಟ ವೇದಿಕೆಯ ರಾಜಕೀಯ ವಿಭಾಗದ ಮುಖ್ಯಸ್ಥರಾದರು. ದೇಶ ರಚಿಸುವ ಮಾತುಕತೆಗೆ ಹೋರಾಟಗಾರರು ಹಾಗು ಬ್ರಿಟನ್ ನಡುವಿನ ಕೊಂಡಿಯಾದರು. ಜೂನ್ 1948ರ ಹೊತ್ತಿಗೆ ಹೊಸ ದೇಶ ಇಸ್ರೇಲ್ ರಚನೆಗೆ ನೀಲನಕ್ಷೆ ಸಿದ್ದವಾದವು. ಸುತ್ತಮುತ್ತ ಶತ್ರುಗಳನ್ನು ಹೊಂದಿರುವ ಕಾರಣ ರಕ್ಷಣಾ ಉಪಕರಣಗಳ ಖರೀದಿಗೆ ಅಗತ್ಯವಾಗಿ 8 ಮಿಲಿಯಾನ್ ಡಾಲರ್ ಬೇಕಾಗಿತ್ತು. ಇದಕ್ಕಾಗಿ ಇಸ್ರೇಲ್ ನಾಯಕ ಬೆನ್ ಗುರಿಯನ್ ಅಮೆರಿಕಾಕೆ ಹೋಗಲು ಯೋಚಿಸಿದರು. ಯುದ್ದ ನಡೆಯುವ ಸಂದರ್ಭ ಇರುವುದರಿಂದ ಅವರು ದೇಶ ಬಿಟ್ಟು ಹೋಗುವುದು ತರವಲ್ಲ ಎಂದು ಯೋಚಿಸಿದ ಗೋಲ್ಡಾ ತಾವು ಹೋದರು. ಅಮೇರಿಕಾದಲ್ಲಿ ನೆಲೆಸಿರುವ ಯಾಹುದಿಗಳಿಂದ  ಧನ ಸಂಗ್ರಹಿಸಲು ನಿರ್ಧರಿಸಿದರು. ಅಲ್ಲಿ ತಾಯಿನೆಲಕ್ಕೆ ಒದಗಿದ ದುಸ್ಥಿತಿಯನ್ನು ಮನ ಮಿಡಿಯುವಂತೆ ವಿವರಿಸಿ 50 ಮಿಲಿಯನ್ ಡಾಲರ್ ಸಂಗ್ರಹಿಸಿ ನಾಡಿಗೆ ಮರಳಿದಾಗ ಅವರಿಗೆ ಭವ್ಯ ಸ್ವಾಗತ ಸಿಕ್ಕಿತ್ತು. ಸ್ವತಹ ಬೆನ್ ಗುರಿಯನ್ ಅವರೇ "ಇಸ್ರೇಲ್ ಎನ್ನುವ ದೇಶವನ್ನು ಸಾಧ್ಯವಾಗಿಸಿದ ಮಹಿಳೆ" ಎಂದು ಘೋಷಿಸಿದರು. ಮೇ 14 1948 ರಲ್ಲಿ ಇಸ್ರೇಲ್ ಸ್ವಾತಂತ್ರ ಘೋಷಣೆಗೆ ಸಹಿ ಹಾಕಿದ 24 ಮಂದಿಯಲ್ಲಿ ಗೋಲ್ಡಾ ಒಬ್ಬರಾಗಿದ್ದರು. ಮರುದಿನವೇ ಅರಬ್ ದೇಶಗಳು ಇಸ್ರೇಲ್ ನತ್ತ ದಾಳಿಯಿಕ್ಕಿದವು. ಇಸ್ರೆಲಿಗರು  ಸಾಹಸದಿಂದ ಅರಬ್ಬರನ್ನು ಸೋಲಿಸಿ 2000 ವರ್ಷಗಳಿಂದ ಕಳೆದುಹೋಗಿದ್ದ ತಾಯಿನೆಲವನ್ನು ಮತ್ತೆ ಪಡೆದರು.

           ಗೋಲ್ಡಾ ಕೆಲಕಾಲ ರಶಿಯಾದಲ್ಲಿ ಇಸ್ರೇಲ್ ರಾಯಭಾರಿಯಾಗಿ ಸೇವೆ ಸಲ್ಲಿಸಿದರು. 1949 ರಲ್ಲಿ ಚುನಾವಣೆಗೆ ಸ್ಪರ್ಧಿಸಿ ಕಾರ್ಮಿಕ ಮಂತ್ರಿಯಾದರು ಮತ್ತು ಹೊಸದೇಶ ಕಟ್ಟಲು ಶ್ರಮವಹಿಸಿದರು. 1956 ರಲ್ಲಿ ವಿದೇಶಾಂಗ ಮಂತ್ರಿಯಾಗಿ ಆಯ್ಕೆಯಾಗಿ ಇಸ್ರೇಲ್ಗೆ ವಿಶ್ವ ಮಾನ್ಯತೆ ಸಿಗಲು ಕಾರಣರಾದರು. 1966 ರವರೆಗೆ ಇದೇ  ಹುದ್ದೆಯಲ್ಲಿ ಮುಂದುವರೆದ ಗೊಲ್ದಾರಿಗೆ ದೊಡ್ಡ ಹೊಣೆಗಾರಿಕೆಯೊಂದು ಸಿಕ್ಕಿತ್ತು. 1969 ರ ಫೆಬ್ರವರಿ 26 ರಂದು ಪ್ರಧಾನಿ ಲೆವಿ ಇಷ್ಕೊಲ್ ನಿಧನದ ನಂತರ 17 ಮಾರ್ಚ್ 1969 ರಂದು ಇಸ್ರೇಲ್ನ ನಾಲ್ಕನೆ ಪ್ರಧಾನಿಯಾಗಿ  ಅಯ್ಕೆಯಾದರು. ಇವರ ನಾಯಕತ್ವ ಗುಣ ವಿಶ್ವಕ್ಕೆ ಪರಿಚಯವಾದದು 1972 ರಲ್ಲಿ. ಅಂದು ಸೆಪ್ಟೆಂಬರ್ 4 ಜರ್ಮನಿಯ ಮ್ಯುನಿಚ್ ಬೇಸಿಗೆ ಓಲಂಪಿಕ್ ಕ್ರೀಡಾಂಗಣ. ಬ್ಲಾಕ್ ಸೆಪ್ಟೆಂಬರ್  ಎಂಬ ಪ್ಯಾಲೆಸ್ಟೈನ್ ಹೋರಾಟಗಾರರು ಇಸ್ರೇಲ್ನ 11 ಜನ ಕ್ರೀಡಾಳುಗಳನ್ನೂ ಒತ್ತೆಯಾಳುಗಳನ್ನಾಗಿ ಇಟ್ಟುಕ್ಕೊಂಡರು. ಜರ್ಮನಿ ಪೋಲಿಸ್ ಕಾರ್ಯಾಚರಣೆಗೆ ಒತ್ತೆಯಾಳುಗಳು , ಉಗ್ರರು ಬಲಿಯದರು. ತಮ್ಮ ದೇಶಕ್ಕೆ ಒದಗಿದ ಅಪಮಾನಕ್ಕೆ ಕ್ಶುದ್ರರಾದ ಪ್ರಧಾನಿ ಈ ಧಾಳಿ ಹಿಂದೆ ಇರುವ ತಲೆಗಳನ್ನು ರಹಸ್ಯವಾಗಿ ಉರುಳಿಸಲು ಅದೇಶಿಸಿದರು. ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್ ವಿಶ್ವದಾದ್ಯಂತ ಹರಡಿರುವ ಈ ಧಾಳಿಯ ಸೂತ್ರದಾರರನ್ನು ಕೊಲ್ಲಳು ಆರಂಭಿಸಿತು. ಆಪರೇಷನ್ ವ್ರತ್ ಆಫ್ ಗಾಡ್ ಎನ್ನುವ ಕಾರ್ಯಾಚರಣೆ 1988 ರವರೆಗೆ ನಡೆಯಿತು. 1979 ರಲ್ಲಿ ಧಾಳಿಯ ಸೂತ್ರಧಾರ ಅಲಿ ಹಸನ್ ಸಲಿಂ ಹತನಾದ. ಹೊರಜಗತ್ತಿಗೆ ತಿಳಿಯದಂತೆ ಇಂಥ ಕೆಲಸಕ್ಕೆ ಕೈ ಹಾಕಿದ್ದು ಗೋಲ್ಡಾ ಅವರ ಎದೆಗಾರಿಕೆಯೇ ಸರಿ.

1973 ಅಕ್ಟೋಬರ್ ತಿಂಗಳು ಇಸ್ರೇಲ್ ಪಾಲಿಗೆ ಕಷ್ಟದ ದಿನಗಳು. ಸಿನಾಯ್ ಕಡೆಯಿಂದ ಈಜ್ಯಿಪ್ಟ್ ಹಾಗು ಗೋಲ್ಡನ್ ಹೈಟ್ ಕಡೆಯಿಂದ ಸಿರಿಯಾ ಜಂಟಿ ಧಾಳಿಯಿಕ್ಕಿದವು. 1966 ರ 6 ದಿನಗಳ ಯುದ್ದದಲ್ಲಿ ಇಸ್ರೇಲ್ ಗಳಿಸಿದ್ದ ಪ್ರದೇಶಗಳಿವು . "ಈಜ್ಯಿಪ್ತ್ತಿಯನ್ನರು ಈಜ್ಯ್ಪಿಪ್ತ್ತಿನವರೆಗೆ ಹಿಂದೆ ಓಡಬಹುದು. ಸಿರಿಯನ್ನರು ಸಿರಿಯಾ ತನಕ ಹೋಗಬಹುದು, ನಮಗೆ ಕೇವಲ ಸಮುದ್ರ ಉಳಿದಿದೆ. ಸೋಲುವ ಮೊದಲು ಹೊರಡುವ" ಎನ್ನುತ್ತಾ  ಮುನ್ಸೂಚನೆ ಇಲ್ಲದೆ ಎರಗಿದ ಶತ್ರುವಿನಿಂದ ದೇಶವನ್ನು ಮುನ್ನಡೆಸಿದ್ದು ಅಲ್ಲದೆ ಸೂಯೆಜ್ ಕಾಲುವೆಯವರೆಗೆ ಸೈನ್ಯ ನುಗ್ಗಿಸಿ ಗೆಲುವು ಸಾಧಿಸಿದರು. ಯೊಂ-ಕಿಪ್ಪೂರ್ ವಾರ್ ಎನ್ನುವ ಈ ಯುದ್ದದಲ್ಲಿ ಅಕ್ಟೋಬರ್ 5 ರಿಂದ 25 ರವರೆಗೆ ಅರಬ್ಬಿಗಳಿಗೆ ಮರೆಯಲಾಗದ ಹೊಡೆತ ನೀಡಿದರು. ಮುಂದೆ ಚುನಾವಣೆಯಲ್ಲಿ ಮತ್ತೆ ಗೆದ್ದು ಬಂದು 1974 ರ ಏಪ್ರಿಲ್ 11 ರಂದು ಗೋಲ್ಡಾ ಮಿರ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇವರು ಪ್ರಧಾನಿ ಇಂದಿರಾ ಗಾಂಧಿ ಸಮಕಾಲೀನರಾಗಿ ಭಾರತ-ಪಾಕ್ ನ 1971ರ ಯುದ್ದದಲ್ಲಿ ಭಾರತಕ್ಕೆ ಯುದ್ದೋಪಕರಣ ನೀಡಿ ಸಹಕರಿಸಿದರು.

ಇಸ್ರೇಲ್ ದೇಶದ ತಾಯಿಯಾಗಿದ್ದ ಗೋಲ್ಡಾ 1978 ರ ಡಿಸೆಂಬರ್ 8 ರಂದು ನಿಧನರದರು. ಅವರ ಭೌತಿಕ ಶರೀರದ ಅಂತ್ಯಸಂಸ್ಕಾರ ಡಿಸೆಂಬರ್ 12 ರಂದು ನಡೆಯಿತು. ಇಸ್ರೇಲ್ನ ಉಕ್ಕಿನ ಮಹಿಳೆ (IRON LADY) ಇಂದು ಇಲ್ಲವಾದರೂ ಅವರ ಕೆಚ್ಚು, ಧೈರ್ಯ ಇಂದಿಗೂ ಇಸ್ರೇಲ್ಗಿದೆ .ಬಗಲಲ್ಲಿರುವ ಹತ್ತಾರು ಶತ್ರುಗಳು ಇಂದಿಗೂ ಗೆಲ್ಲಲಾಗದ ಇಸ್ರೇಲ್ ಮಣ್ಣೇ ಇದಕ್ಕೆ ಸಾಕ್ಷಿ.

                                                                               
                                                                                            -Tharanatha sona