Saturday, June 10, 2017

ಆಫ್ರಿಕಾದ ಕಾಡಿನಲ್ಲೊಂದು ಸರ್ಜಿಕಲ್ ಸ್ಟ್ರೈಕ್ ಭಾಗ-1


       ಸಿಯಾರ್ ಲಿಯೋನ್ ಸೇನೆಯ ಸೈನಿಕ  ಮುಸ ಬಂಗುರಾ ಬಂಧಿಯಾಗಿದ್ದ  ಗುಂಡಿ ತುಂಬಾ ಆಳವೇನೂ ಇರಲಿಲ್ಲ , ಕೇವಲ 2 ಮೀಟರ್ ಅಷ್ಟೇ. ಆದರೆ ಸುತ್ತಲು ಹರಡಿದ್ದ ಮಾನವ ತ್ಯಾಜ್ಯ , ಕೆಸರು ನರಕದರ್ಶನ ಮಾಡಿಸುತಿತ್ತು . ಅದಲ್ಲದೆ ಹಲ್ಲೆಯಿಂದ ದೇಹದಲ್ಲಿ ಅದ ಗಾಯಗಳು ಅಪಾರ ಹಿಂಸೆ ಉಂಟುಮಾಡುತ್ತಿದ್ದವು. ಮದ್ಯ ಮತ್ತು ಮಾದಕ ಪದಾರ್ಥ ಸೇವಿಸಿ ಕ್ರೂರವಾಗಿ ದಂಡಿಸುತ್ತಿದ್ದ ನರ ರಾಕ್ಷಸರ ಕೈಯಿಂದ ಹೊರಬಂದು ಬದುಕುವ ಸಾಧ್ಯತೆಯೂ ಇರಲಿಲ್ಲ. 


ಪಶ್ಚಿಮ ಆಫ್ರಿಕಾದ ಸಿಯಾರ್ ಲಿಯೋನ್ 
ಅದು ಸಿಯಾರ್ ಲಿಯೋನ್ , ಪಶ್ಚಿಮ ಆಫ್ರಿಕಾದ ಪುಟ್ಟ ರಾಷ್ಟ್ರ. ವಿಸ್ತೀರ್ಣದಲ್ಲಿ ಕರ್ನಾಟಕದ ಅರ್ಧದಷ್ಟು ಇಲ್ಲದ (71,740 km^2 ) ಅತ್ಯಂತ ಕಡು ಬಡತನದಿಂದ ಕೂಡಿದ ರಾಷ್ಟ್ರ. ಇಂತಹ ರಾಷ್ಟ್ರದಲ್ಲಿ 1991ರಿಂದ ಆರಂಭವಾಗಿದ್ದ ನಾಗರಿಕ ಯುದ್ಧ 9 ವರ್ಷ ಆದರೂ ಮುಗಿದಿರಲಿಲ್ಲ, 75,000ಕ್ಕೂ ಹೆಚ್ಚು ಜನರ ಪ್ರಾಣಹರಣವಾಗಿತ್ತು.  ನಾಗರಿಕರ ರಕ್ಷಣೆಗಾಗಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಅಡಿಯಲ್ಲಿ ಭಾರತವು ಸೇರಿದಂತೆ ಅನೇಕ ದೇಶಗಳ ಸೇನೆಗಳು ಕಾರ್ಯನಿರ್ವಹಿಸುತ್ತಿದ್ದವು. ಹಿಂದೊಮ್ಮೆ ಬ್ರಿಟಿಷ್ ವಸಾಹತು ಆಗಿದ್ದ ದೇಶದ ರಕ್ಷಣೆಯ ಸಲುವಾಗಿ  ಬ್ರಿಟನ್ , ಸಿಯಾರ್ ಲಿಯೋನ್ ಸೇನೆಗೆ ತರಭೇತಿ ನೀಡುತ್ತಿತ್ತು .





ಅದು 25 ಆಗಸ್ಟ್ 2000ನೇ ಇಸವಿ,  ಮಧ್ಯಾಹ್ನದ  ವೇಳೆಯಲ್ಲಿ ಮೇಜರ್ ಅಲನ್ ಮಾರ್ಷಲ್ ನೇತೃತ್ವದಲ್ಲಿ 11 ಜನ ರಾಯಲ್ ಐರಿಶ್ ರೆಜಿಮೆಂಟ್ ನ ಮೊದಲನೇ ಬೆಟಾಲಿಯನ್ ಯೋಧರು ಹಾಗು  ಓರ್ವ (ಮುಸ ಬಂಗುರ) ಸಿಯಾರ್ ಲಿಯೋನ್ ಸರ್ಕಾರಿ ಸೇನೆಯ ಸೈನಿಕನನ್ನು ಕೂಡಿದ ಗಸ್ತುಪಡೆ ಸಂಚರಿಸುತ್ತಿತ್ತು. ರಾಜಧಾನಿ ಫ್ರೀಟೌನ್ ನಲ್ಲಿ ಮುಖ್ಯನೆಲೆ ಹೊಂದಿದ್ದ ಪಡೆ, ರೊಕೆಲ್ ಕ್ರೀಕ್ ನದಿದಂಡೆಯ ಸಾಸ್ ಅರಣ್ಯ ಪ್ರದೇಶದಲ್ಲಿ ಸಾಗುತ್ತಿದ್ದಾಗ ಸಮೀಪದಲ್ಲಿ ಬಂಡುಕೋರರ ತಾಣವಿರುವ ವರ್ತಮಾನ ಬಂತು. ಆಕ್ರ ಹಿಲ್ಸ್ ಪ್ರದೇಶದಲ್ಲಿದ್ದ ಮಾಗ್ಬೇನಿ ಮತ್ತು ಗಬೇರಿ ಬಾನದ ಹಳ್ಳಿಗಳು ವೆಸ್ಟ್ ಸೈಡ್ ಬಾಯ್ಸ್ ಎನ್ನುವ ನಟೋರಿಯಸ್ ಗ್ಯಾಂಗ್ನ ತಾಣವಾಗಿತ್ತು. 1991ರಲ್ಲಿ ರೆವೊಲ್ಯೂಷನರಿ ಯುನೈಟೆಡ್ ಫ್ರಂಟ್ (R.U.F ) ಎನ್ನುವ ಸಂಘಟನೆ ಸರ್ಕಾರದ ವಿರುದ್ಧ  ಹೋರಾಟ ಆರಂಭಿಸಿತು. ವೆಸ್ಟ್ ಸೈಡ್ ಬಾಯ್ಸ್ ಗಳು 1997ರ ವರೆಗೆ R.U.F ನ ಜೊತೆ ಸೇರಿ ಕೊನೆಗೆ ಹೋರಾಟದಲ್ಲಿ ಸೋತು ಈ ಕಾಡಿನಲ್ಲಿ ವಾಸವಾಗಿದ್ದರು. ಮಹಿಳೆಯರು ಮಕ್ಕಳನ್ನು ಸೇರಿದಂತೆ  400ಕ್ಕೂ ಹೆಚ್ಚು ಸದಸ್ಯರಿದ್ದ ಈ ತಂಡದ ನಾಯಕ 24ರ ಹರೆಯದ ಪೋಡೇ ಕಲ್ಲೆ, ಸಿಯಾರ್ ಲಿಯೋನ್ ಸೇನೆಯ ಮಾಜಿ ಸೈನಿಕ.  ಸದಾ ಮದ್ಯ,ಅಮಲು ಪದಾರ್ಥಗಳ ನಶೆಯಲ್ಲಿರುತ್ತಿದ್ದ ಇವರುಗಳ ಮುಖ್ಯ ಉದ್ದೇಶ ಅಲ್ಲಿನ ವಜ್ರದ ಗಣಿಗಳ ಮೇಲೆ ಹಿಡಿತ ಸಾಧಿಸುವುದು. ಹಾಗೆಯೇ ಸಿಕ್ಕಿದ ವಜ್ರಗಳನ್ನು ಅಲ್ ಕೈದಾಕ್ಕೆ ಮಾರಿ, ಶಸ್ತ್ರಾಸ್ತ್ರಗಳನ್ನು ಸಂಪಾದಿಸಿದರು.


ವಿಶ್ವಸಂಸ್ಥೆಯ ತಪಾಸಣಾ ಕೇಂದ್ರ ದಾಟಿ ಫ್ರೀಟೌನ್ ನಿಂದ ಸುಮಾರು 50 km ದೂರದಲ್ಲಿರುವ ಗಬೇರಿ ಬಾನದತ್ತ  ಮೂರು  ವಾಹನಗಳಲ್ಲಿ ಬ್ರಿಟಿಷ್ ಗಸ್ತು ಪಡೆ ಹೊರಟಿತ್ತು. ಸ್ವಲ್ಪ ಸಮಯದ ನಂತರ ದಟ್ಟ ಕಾಡಿನಲ್ಲಿ ಸಾಗುತ್ತಿದ್ದಾಗ ಎದುರಾಗಿತ್ತು, ಕಂಟೆಬಿ ಎಂಬಾತನ ನೇತೃತ್ವದಲ್ಲಿದ್ದ 50 ಮಂದಿ ವೆಸ್ಟ್ ಸೈಡ್ ಬಾಯ್ಸ್ ತಂಡ.  ತಮ್ಮದು ಕೇವಲ  ಗಸ್ತು ಪಡೆ ಎಂದು ಮೇಜರ್ ಅಲನ್ ಮಾರ್ಷಲ್ ಹೇಳಿದರೂ ಕೇಳದೆ ಬಂದೂಕು ತೋರಿಸಿ ಬೆದರಿಸಿ ವಾಹನದಿಂದ ಕೆಳಗಿಳಿಸಿದರು. ಯೋಧರು ಬಂದೂಕು ಕೆಳಗಿಳಿಸುತ್ತಿದಂತೆಯೇ ಅವರಲ್ಲಿದ್ದ ಆಯುಧಗಳನ್ನು ಕಸಿದುಕೊಂಡು, ಎಲ್ಲರನ್ನು ವಶಪಡಿಸಿಕೊಂಡರು. ಜೊತೆಗಿದ್ದ ಲಿಫ್ಟಿನಂಟ್ ಮುಸ ಬಂಗುರಾನಿಗೆ ಕೂಡ  ಹಲ್ಲೆಮಾಡಿದರು. ಏಕೆಂದರೆ ಹಿಂದೆ ಈ ಮುಸ ಮತ್ತು ಕೆಲವು ವೆಸ್ಟ್ ಸೈಡ್ ಬಾಯ್ಸ್ ತಂಡದ ಸದಸ್ಯರು ಸೇನೆಯಲ್ಲಿ ಜೊತೆಗಿದ್ದರು. ಮುಸ ಸೇನೆಗೆ ನಿಷ್ಠನಾಗಿದ್ದರೆ, ಇವರುಗಳು ಬಂಡೆದ್ದು ಅರಣ್ಯದಾಚೆ ನೂಕಲ್ಪಟ್ಟಿದ್ದರು. ಈಗ ಪ್ರತಿಕಾರ ತೀರಿಸುವ ಸಮಯ ಒದಗಿತ್ತು. ಎಲ್ಲ 12 ಮಂದಿಯನ್ನು ದಟ್ಟ ಅಡವಿಯಲ್ಲಿದ್ದ ಗಬೇರಿ ಬಾನದತ್ತ  ಕರೆದೊಯ್ದರು. ಮೂಸಾನಿಗೆ ಅಮಾನುಷವಾಗಿ ಹಲ್ಲೆ ಮಾಡಿ ಗುಂಡಿಯೊಂದಕ್ಕೆ ಎಸೆದರು. ಉಳಿದವರನ್ನು ಪೋಡೇ ಕಲ್ಲೆಯ ಮನೆ ಸಮೀಪ  ಕೋಣೆಯೊಂದರಲ್ಲಿ ಕೂಡಿ ಹಾಕಿದರು .

ಉಗ್ರರ ನಾಯಕ ಪೋಡೇ ಕಲ್ಲೆ
ಈ ಸಂಗತಿ ಫ್ರೀಟೌನ್ ನಲ್ಲಿದ್ದ ಸೇನೆಯ ಕಮಾಂಡಿಂಗ್ ಆಫೀಸರ್ ಸೈಮನ್ ಫಾರ್ಡೆಮ್ ಗೆ ಮುಟ್ಟಿ, ಸಂಧಾನಕ್ಕೆ ಮುಂದಾದರು. ಈ 11 ಮಂದಿ ಐರಿಶ್ ಸೇನಾಪಡೆಯ ಯೋಧರು, ಅಪಹರಕಾರರಿಗೆ ಅಮೂಲ್ಯ ನಿಧಿಯಂತೆ ಕಂಡರು. ಅವರ ಬಿಡುಗಡೆ ಮಾಡಿದರೆ ತಮ್ಮ ಅನೇಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದೆಂದು ಯೋಚಿಸಿದರು. ಸೇನೆಯ ಅಧಿಕಾರಿಗಳು, ವಶದಲ್ಲಿರುವ  ಸೈನಿಕರನ್ನು ತಾವು ಖುದ್ದು ಕಂಡ ನಂತರವೇ ಸಂಧಾನ ಪ್ರಕ್ರಿಯೆ ಆರಂಭಿಸಲು ಸೂಚಿಸಿದರು. ಎರಡು ದಿನಗಳ ನಂತರ ಕಮಾಂಡಿಂಗ್ ಆಫೀಸರ್ ಸೈಮನ್ ಫಾರ್ಡೆಮ್ ಮತ್ತು ನಾಯಕ ಪೋಡೇ ಕಲ್ಲೆಯ ಭೇಟಿ ಆಯಿತು. ಸಿಕ್ಕ ಅವಕಾಶವನ್ನು ಬಳಸಿಕೊಂಡ ಅಲನ್ ಮಾರ್ಷಲ್ ಜೊತೆಗಿದ್ದ ಸಹಾಯಕ ಪ್ಲಾಹೆರ್ಟಿ, ತಮ್ಮನ್ನು ಬಂಧಿಸಿರಿಸಿದ ಸ್ಥಳದ ನಕಾಶೆಯನ್ನು ಹಸ್ತಲಾಘವದ ಸಮಯದಲ್ಲಿ ಸೈಮನ್ ಫಾರ್ಡೆಮ್ ಗೆ ನೀಡಿದ್ದರು. ಇದು ಮುಂದೆ ನೆರವಿಗೆ ಬಂತು. ವೆಸ್ಟ್ ಸೈಡ್ ಬಾಯ್ಸ್ಗಳ ಬೇಡಿಕೆ ವಿಲಕ್ಷಣವಾಗಿತ್ತು . ತಮ್ಮನ್ನು   ಒಂದು ರಾಜಕೀಯ ಸಂಘಟನೆಯಾಗಿ ಮಾನ್ಯ ಮಾಡಬೇಕು. ಜೈಲುಗಳಲ್ಲಿ ಬಂಧಿತರಾಗಿರುವ ತಮ್ಮ ಸಹವರ್ತಿಗಳನ್ನು ಬಿಡುಗಡೆ ಮಾಡಬೇಕು. ಲಂಡನ್ನಲ್ಲಿ ತಮ್ಮ ಸದಸ್ಯರೊಬ್ಬರಿಗೆ ಉಚಿತ ಶಿಕ್ಷಣ ನೀಡಬೇಕು. ಕೊನೆಯದು ಮಾತ್ರ ಆಶಾದಾಯಕವಾಗಿತ್ತು, 'ತಮಗೆ ಒಂದು ಸ್ಯಾಟಲೈಟ್ ಫೋನ್ ಮತ್ತು ಔಷಧ ಒದಗಿಸಿದರೆ ಐದು  ಜನ ಒತ್ತೆಯಾಳುಗಳನ್ನು ಬಿಡುಗಡೆ ಗೊಳಿಸುತ್ತೇವೆ' ಎಂದು ಹೇಳಿದರು. ಅಂತೆಯೇ ಸ್ಯಾಟೆಲೈಟ್ ಫೋನ್ ಒಂದನ್ನು ಒದಗಿಸಿ ಆಗಸ್ಟ್ 31ರಂದು ಐದು ಯೋಧರನ್ನು ಬಿಡುಗಡೆ ಮಾಡಿಸಲಾಯಿತು. ಇತ್ತ ಫೋನ್ ಪಡೆದುಕೊಂಡ ಸ್ವಯಂಘೋಷಿತ  ಬ್ರಿಗೇಡಿಯರ್ ಪೋಡೇ ಕಲ್ಲೆ ಅದರ ಮೂಲಕ ಬಿಬಿಸಿ (BBC)ವಾಹಿನಿಯನ್ನು ಸಂಪರ್ಕಿಸಿ ತಮ್ಮ ಬೇಡಿಕೆಗಳ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ತಿಳಿಯುವಂತೆ ಮಾಡಿದ್ದ. ಅಪಹರಣಕಾರರ ಸಂಯಮ ಕೆಡುವ ಮೊದಲೇ ಒಂದು ನಿರ್ಧಾರಕ್ಕೆ ಬರಲೇಬೇಕಿತ್ತು.

ಶತ್ರುಗಳ ವಶದಲ್ಲಿ ತಮ್ಮ ಸೇನೆಯ ಯೋಧರು ಬಂಧಿಯಾಗಿರುವುದು ಯಾವುದೇ ದೇಶಕ್ಕೂ ಸಹಿಸದ ವಿಷಯ. ಅದು ಕೂಡ ಸೂರ್ಯ ಮುಳುಗದ ಸಾಮ್ರಾಜ್ಯ ಗ್ರೇಟ್ ಬ್ರಿಟನ್ ಗೆ !!!

                                                                                                      -Tharanatha sona


www.nilume.net ನಲ್ಲಿ ಪ್ರಕಟವಾಗಿದ್ದ ಲೇಖನ 

Saturday, May 20, 2017

NASA ದ ಬುಡಕ್ಕೆ ಬೆಂಕಿ ಇಟ್ಟ ಪೋರ !!!


 ಜನವರಿ 26ರ  ಮುಂಜಾನೆ ಬೆಚ್ಚಗೆ ಮಲಗಿದ್ದ ಜೇಮ್ಸ್ ಇನ್ನು ಇದ್ದಿರಲಿಲ್ಲ . ಕೊನೆಯ ಹೊರಗೆ ತಾಯಿ ಕೂಗುವುದನ್ನು ಕೇಳಿ ಎಚ್ಚರಗೊಂಡ . ತಾಯಿ ಹೊರಗೆ ಯಾರೋ ನಿನ್ನನ್ನು ಕರೆಯುತ್ತಿದ್ದಾರೆ ಎಂದು ಹೇಳಿದಾಗ ,ಏನೊಂದು ಅರ್ಥವಾಗದೆ ಕೋಣೆಯಿಂದ ಹೊರಬಂದ. ಹೊರಬಂದಾಗ ಬಂದೂಕುಧಾರಿ ಪೊಲೀಸರು , FBI (ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್ - ಅಮೆರಿಕಾದ ತನಿಖಾ ಸಂಸ್ಥೆ )ಯ ವ್ಯಕ್ತಿಗಳು ಇನ್ನು ಕೆಲವರೊಂದಿಗೆ ನಿಂತಿದ್ದರು. ಆಶ್ಚರ್ಯಚಕಿತನಾದ ಜೇಮ್ಸ್ , ಏಕೆಂದರೆ ಆಗ ಅವನಿಗೆ ಕೇವಲ ಹದಿನಾರು ವರ್ಷಗಳು. ನಾಸಾ (NASA) ದ  ಬಟ್ಟೆ ತೊಟ್ಟ ಕೆಲವು ಜನರನ್ನು ಕಂಡಾಗ ಅವನಿಗೆ ವಿಷಯ ಏನೆಂದು ಹೊಳೆಯಿತು. ರಾಕೆಟ್ ನ ಬುಡಕ್ಕೆ ಬೆಂಕಿ ಇಡುವ ನಾಸಾದ ಬುಡಕ್ಕೆ ಈತ ಬೆಂಕಿ ಹಚ್ಚಿದ !!!.



ಅದು ಆಗಸ್ಟ್ 1999 ರ ಸಮಯ, ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ಕೆಲವು ತಂತ್ರಜ್ಞರಿಗೆ ಏನೋ ಎಡವಟ್ಟಾದ ಸೂಚನೆ ಸಿಕ್ಕಿತ್ತು. ಅವರ ಕಂಪ್ಯೂಟರ್ಗಳಿಗೆ  ಹೊರಗಿನವರಾರೋ ಪ್ರವೇಶಿಸಿದ್ದಾರೆ ಹಾಗು ಕೆಲವು ದಾಖಲೆಗಳು ಕಳವಾಗಿದೆ. ಇದು ಸಾಮಾನ್ಯ ಸಂಗತಿ ಆಗಿರಲಿಲ್ಲ. ಅಲ್ಲಿರುವ ಕಂಪ್ಯೂಟರ್ಗಳು ಉಪಗ್ರಹ ಸಂವಹನ , ನಿಯಂತ್ರಣ ಕೆಲಸಕ್ಕೆ ಮೀಸಲಿರಿಸಿರುವಂತಹದು.  ಹೊರಗಿನಿಂದ ಒಂದು ಹುಳು ಸಹ ನಾಸಾ ಕೇಂದ್ರಕ್ಕೆ ಪ್ರವೇಶ ಮಾಡುವುದು ಕಷ್ಟವಿತ್ತು. ಅಂತಹದ್ದರಲ್ಲಿ ಮೇಧಾನಿ ವಿಜ್ಞಾನಿಗಳಿದ್ದ ಸಂಸ್ಥೆಯ  ಕಂಪ್ಯೂಟರ್ಗೆ ಯಾರೋ ಕನ್ನ ಕೊರೆಯುವುದೆಂದರೇನು?.  ಕೊನೆಗೆ ಮೂರು ವಾರಗಳ ಕಾಲ ಆ ಕಂಪ್ಯೂಟರ್ಗಳನ್ನು ಸ್ಥಗಿತಗೊಳಿಸಿ ಕೂಲಂಕುಷ ತನಿಖೆಗೆ ಒಳಪಡಿಸಿದ್ದರು. ಅಲ್ಲಿಗೆ ಸುಮಾರು 41,000 ಡಾಲರ್ ವೆಚ್ಚವಾಗಿತ್ತು, ತಂತ್ರಜ್ಞರ ತಲೆಯು ಬಿಸಿಯಾಗಿತ್ತು.

ತನಿಖೆಯಿಂದ ತಿಳಿದು ಬಂದದ್ದೇನೆಂದರೆ, ಅಮೆರಿಕಾದ DARA (Defense Threat Reduction Agency) ಎನ್ನುವ ಭದ್ರತಾ ಸಂಸ್ಥೆಯ ಸುಮಾರು ಹತ್ತು ಕಂಪ್ಯೂಟರ್ಗಳನ್ನು ಯಾರೋ ಹ್ಯಾಕ್ ಮಾಡಿದ್ದರು. c0mrade ಎಂಬ ನಾಮದಿಂದ ನೆಟ್ ವರ್ಕ್ ನ ಸುರಕ್ಷತೆಗೆ ಕನ್ನ ಕೊರೆದು ಒಳನುಗ್ಗಿದ ಅವರು, ಉದ್ಯೋಗಿಗಳ ಬಳಕೆದಾರ ಹೆಸರು ಹಾಗು ಪಾಸ್ವರ್ಡ್ ಕದ್ದಿದ್ದರು. ಅಲ್ಲದೆ ಕೆಲವು ಗೌಪ್ಯ ಸಂದೇಶಗಳನ್ನು ಓದಿದ್ದರು . ಇದರಿಂದ ಇನ್ನೊಂದು ಸರ್ಕಾರಿ  ಸಂಸ್ಥೆ ನಾಸಾದ  ಕಂಪ್ಯೂಟರ್ಗೆ ನುಗ್ಗಲು ಸಾಧ್ಯವಾಯಿತು. ಹೀಗೆ ಪ್ರವೇಶ ಪಡೆದ  ನಂತರ ಅಲ್ಲಿದ್ದ ಕೆಲವು ಮಾಹಿತಿಗಳನ್ನು ಕದ್ದಿದ್ದರು. ಇದರಲ್ಲಿ ನಾಸಾದ ನಿಯಂತ್ರಣದಲ್ಲಿರುವ ಬಾಹ್ಯಾಕಾಶ ನಿಲ್ದಾಣದ ಸಾಫ್ಟ್ವೇರ್ ಕೂಡ ಸೇರಿತ್ತು. ಈ ಸಾಫ್ಟ್ವೇರ್ ಬಾಹ್ಯಾಕಾಶ ನಿಲ್ದಾಣದ ಒಳಗಿರುವ ತಾಪಮಾನ , ತೇವಾಂಶ ಮೊದಲಾದ ವಾತಾವರಣ ಸಂಬಂಧಿ ಕೆಲಸಗಳನ್ನು ನಿಯಂತ್ರಿಸುತ್ತಿತ್ತು . ಭಾರಿ ಬೆಲೆಬಾಳುವ ಈ ಸಾಫ್ಟ್ವೇರ್ನ ಸೊರ್ಸ್ ಕೋಡ್( Source Code)  ಕದ್ದ ದುಷ್ಕರ್ಮಿಗಳನ್ನು ಹುಡುಕುವುದು ಅನಿವಾರ್ಯವಾಗಿತ್ತು.



ಜೊನಾಥನ್ ಜೇಮ್ಸ್ 

ಎರಡು ಸಾವಿರನೇ ಇಸವಿಯ ಜನವರಿ 26 ರಂದು  ತನಿಖೆ ಮಾಡುತ್ತಾ ಹೋದ ತನಿಖಾ ಸಂಸ್ಥೆಗಳು ಕೊನೆಗೆ  ನಿಂತದ್ದು ,ಹದಿನಾರು ವರ್ಷದ ಜೊನಾಥನ್ ಜೇಮ್ಸ್ ಮನೆಯ ಮುಂದೆ. ಭಾರಿ ಸುರಕ್ಷತಾ ಕ್ರಮ ಹೊಂದಿದ್ದ ಸಂಸ್ಥೆಯ ಕಂಪ್ಯೂಟರ್ಗೆ 16 ವರ್ಷದ ಪೋರನೊಬ್ಬ ತನ್ನ ಸಾಮಾನ್ಯ ಪೆಂಟಿಯಂ ಆವೃತ್ತಿಯ ಗಣಕ ಬಳಸಿ  ಲಗ್ಗೆ ಇಟ್ಟಿದ್ದ. ಅವನನ್ನು ವಿಚಾರಣೆಗೆ ಒಳಪಡಿಸಿ ಅವನಲ್ಲಿದ್ದ 5 ಕಂಪ್ಯೂಟರ್, ಸಿಡಿಗಳು  ಸೇರಿದಂತೆ ಎಲ್ಲ ವಸ್ತುಗಳನ್ನು ವಶಪಡಿಸಿಕೊಂಡರು. ವಿಚಾರಣೆ ಮಾಡಿದಾಗ ತನ್ನ ತಪ್ಪನ್ನು ಒಪ್ಪಿಕೊಂಡ . ಇನ್ನು ವಯಸ್ಕನಾಗದ ಕಾರಣ 6 ತಿಂಗಳು ಗೃಹಬಂಧನದಲ್ಲಿ ಇರಿಸಿ, ಕಂಪ್ಯೂಟರ್ನ ಬಳಕೆಯನ್ನು ಪ್ರತಿಬಂಧಿಸಿದರು. ಕೊನೆಗೆ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಬಿಡುಗಡೆ ಮಾಡಿದ್ದರು. 



1983ರಲ್ಲಿ ಹುಟ್ಟಿದ್ದ ಜೇಮ್ಸ್ 6 ವರ್ಷದ ಬಾಲಕನಾಗಿದ್ದಾಗಲೇ ಕಂಪ್ಯೂಟರ್ ಬಳಸಲು ಆರಂಭಿಸಿದ. ಒಮ್ಮೆ ಇವನ ಕಂಪ್ಯೂಟರ್ ಬಳಕೆ ಅತಿಯಾಯಿತೆಂದು , ಇನ್ನು ಕಂಪ್ಯೂಟರ್ ಬಳಸಬಾರದೆಂದು ತಂದೆ ರೇಗಿದಾಗ ರಚ್ಚೆ ಹಿಡಿದು ಮನೆ ಬಿಟ್ಟು ಓದಿ ಹೋಗಿದ್ದ. ಹೀಗೆ ಕಂಪ್ಯೂಟರ್ ಹುಚ್ಚು ಹಿಡಿಸಿಕೊಂಡಿದಾತನಿಗೆ ಯೂನಿಕ್ಸ್ (Unix) ಹಾಗು ಸಿ(C)  ಭಾಷೆಯಲ್ಲಿ ಪರಿಣತಿಯಿತ್ತು. ಇದನ್ನು ನಾಸಾದ ಮೇಲೆ ಪ್ರಯೋಗಿಸಿ ತನ್ನ ಜೀವನವನ್ನು ಹಾಳು ಮಾಡಿಕೊಂಡ.


ಈ ಘಟನೆಯ ನಂತರ ನಡೆದ ಸಂದರ್ಶನದಲ್ಲಿ ಆತ ಹೇಳಿದಿಷ್ಟು '' ನಾಸಾದ ಕಂಪ್ಯೂಟರ್ಗಳು ಸಾಕಷ್ಟು ಸುರಕ್ಷಿತವಾಗಿಲ್ಲೆಂದು ನಾನು ಮೊದಲೇ ಅದರ ಗಣಕ ವಿಭಾಗದ ಮುಖ್ಯಸ್ಥರಿಗೆ ತಿಳಿಸಿದ್ದೆ. ಅವರು ಅದರ ಬಗ್ಗೆ ನಿರ್ಲಕ್ಷ ತೋರಿದ್ದರಿಂದ ನಾನು ಈ ಕೆಲಸ ಮಾಡಿದೆ''. ತಾನು ಕೇವಲ ಕುತೂಹಲಕ್ಕಾಗಿ ಹ್ಯಾಕ್ ಮಾಡಿದ್ದೆಂದು, ಆ ಸಾಫ್ಟ್ವೇರ್ ನ ಸೊರ್ಸ್ ಕೋಡ್ ನ್ನು ಅಧ್ಯಯನಕ್ಕಾಗಿ ಬಳಸಿಕೊಂಡೆನೆಂದು  ಹೇಳಿದ.


ಹೀಗಿರುವಾಗ 2008ನೇ ಜನವರಿ 17 ರಂದು ಅಮೇರಿಕಾದಲ್ಲಿ ಬೃಹತ್ ಸೈಬರ್ ಧಾಳಿ ನಡೆಯಿತು. TJX ಎನ್ನುವ ಗೃಹಪಯೋಗಿ ವಸ್ತು ತಯಾರಿಕಾ ಸಂಸ್ಥೆ, ಬೋಸ್ಟನ್ ಮಾರ್ಕೆಟ್ ,ಆಫೀಸ್ ಮ್ಯಾಕ್ಸ್ ಎನ್ನುವ ಸಂಸ್ಥೆಗಳ ಸರ್ವರ್ಗಳಿಗೆ ದುಷ್ಕರ್ಮಿಗಳು ಧಾಳಿ ನಡಿಸಿದ್ದರು, ಹಾಗು ಈ  ಧಾಳಿಯ ಸಮಯ  ಸರ್ವರ್ಗಳಲ್ಲಿ ಶೇಖರವಾಗಿದ್ದ  ಗ್ರಾಹಕರ ಖಾಸಗಿ ಮಾಹಿತಿ ಹಾಗು ಕ್ರೆಡಿಟ್ ಕಾರ್ಡ್ನ ಮಾಹಿತಿಗಳನ್ನು ಕದ್ದಿದ್ದರು.  ಪೊಲೀಸರು ಮತ್ತೆ ಜೇಮ್ಸ್ ಮೇಲೆ ಸಂದೇಹ ಪಟ್ಟರು ಮತ್ತು ಅವನ ಸಂಬಂಧಿಕರ ಮನೆಗಳ ಮೇಲೂ ಧಾಳಿ ಮಾಡಿದ್ದರು. ಆದರೆ ಜೇಮ್ಸ್ ನ ಪಾಲ್ಗೊಳ್ಳುವಿಕೆ ಬಗ್ಗೆ ಸೂಕ್ತ ಸಾಕ್ಷ್ಯಧಾರಗಳು ದೊರೆಯಲಿಲ್ಲ. ಈ ಘಟನೆಗಳಿಂದ  ಮಾನಸಿಕವಾಗಿ ಕುಗ್ಗಿ ಹೋದ ಜೇಮ್ಸ್ ಕೊನೆಗೆ ಮೇ ಹದಿನೆಂಟು, 2008 ರಂದು ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ.

ಅವನು ಬರೆದಿಟ್ಟ ಆತ್ಮಹತ್ಯಾ ಪತ್ರದಲ್ಲಿ  ಘಟನೆಗೂ ತನಗೂ ಸಂಬಂಧವಿಲ್ಲವೆಂದು , ತನಗೆ ನ್ಯಾಯಾಂಗದ ಮೇಲೆ ನಂಬಿಕೆ ಇಲ್ಲವೆಂದು , ನಾನು ಘಟಿಸಿದ ಸಂಗತಿಗಳ ಮೇಲೆ ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡಿದ್ದು, ಆತ್ಮಹತ್ಯೆಯೊಂದೇ ನನಗೆ ಆಯ್ಕೆಯಾಗಿದೆ ಎಂದು ಬರೆದಿದ್ದ . ' TJX ಸೈಬರ್  ಧಾಳಿಯಲ್ಲಿ ಅವನ ಕೈವಾಡವಿರಲಿಲ್ಲ ಮತ್ತು  ಅವನ ಬಳಿ ಸಾಕಷ್ಟು ಹಣವಿರಲಿಲ್ಲ'  ಎಂದು ಅವನ ತಂದೆ ಹೇಳುತ್ತಾರೆ. ಆ ವೇಳೆಗಾಗಲೇ ಜೇಮ್ಸ್, ಕ್ಯಾನ್ಸರ್ ನಿಂದಾಗಿ  ತನ್ನ ತಾಯಿಯನ್ನು ಕಳೆದುಕೊಂಡಿದ್ದ.

ತಪ್ಪಾದ ದಾರಿ ಒಬ್ಬ ಬುದ್ದಿವಂತನನ್ನು ಎಳೆವಯಸ್ಸಿನಲ್ಲೇ ಅವನತಿಗೆ ತಲುಪಿಸಿತು. ಹರೆಯದ ವಯಸ್ಸಿನ ಹುಚ್ಚು ಸಾಹಸವೊಂದು ಅವನ ಬದುಕಿಗೆ ಕೊಳ್ಳಿಯಾಯಿತು . ಇಂದಿಗೂ ಜಗತ್ತು ಅವನನ್ನು ಟಾಪ್-5 ಹ್ಯಾಕರ್ಗಳಲ್ಲಿ ಒಬ್ಬ ಎಂದು ಗುರುತಿಸುತ್ತದೆ.  ಈ ಘಟನೆಗಳ ನಂತರ ಇಂತಹ ಹ್ಯಾಕರ್ಗಳ ಪ್ರತಿಭೆಯನ್ನು(?) ಗುರುತಿಸಿ ಸೈಬರ್ ಭದ್ರತಾ ಸಂಸ್ಥೆಗಳು ಅವರನ್ನು ಉದ್ಯೋಗಿಗಳನ್ನಾಗಿ ನೇಮಕ ಮಾಡಿಕೊಂಡಿವೆ. ಕಳ್ಳರ ದಾರಿ ಇನ್ನೊಬ್ಬ ಮಾತ್ರ ಗೊತ್ತು ಅಲ್ಲವೇ ?.

ಮಾಹಿತಿ ಮತ್ತು ಚಿತ್ರಕೃಪೆ ::- ಅಂತರ್ಜಾಲ
                                                                                                        - Tharanatha Sona

Sunday, May 14, 2017

ಇಸ್ರೇಲ್ ವಿರುದ್ಧ ಹಲವರು ಅವಾಗಿದ್ರು , ಇವಾಗಿಲ್ಲ !!!!

                                         ಭಾಗ 1 - ಮ್ಯೂನಿಚ್  ಹತ್ಯಾಕಾಂಡ


ಇಸ್ರೇಲ್ ಕೆಚ್ಚು ಪ್ರತಿಕಾರಕ್ಕೆ ಹೆಸರಾದ ದೇಶ. ಹಮ್ಮುರಭಿಯ '' ಕಣ್ಣಿಗೆ ಕಣ್ಣು , ರಕ್ತಕ್ಕೆ ರಕ್ತ ''ನೀತಿ  ಇನ್ನೆಲ್ಲಿ ಇದೆಯೋ ಗೊತ್ತಿಲ್ಲ. ಆದರೆ ಇಸ್ರೇಲ್ ಮಾತ್ರ ತನ್ನ ಶತ್ರುಗಳನ್ನು ನಿರ್ನಾಮ ಮಾಡುವ ಮೂಲಕ ಇಂದಿಗೂ ಪಾಲಿಸುತ್ತಿದೆ, . ಹಾಲಿವುಡ್ನ ಸಾಹಸ ಸಿನಿಮಾಕ್ಕೆ ಸ್ಪೂರ್ತಿಯಾಗುವ ಕತೆಯೇ ಈ ಲೇಖನ '' ಮ್ಯೂನಿಚ್  ಹತ್ಯಾಕಾಂಡ ''.

ಕ್ರೀಡಾಗ್ರಾಮದಲ್ಲಿರುವ ಧಾಳಿ ನಡೆದ  ಕಟ್ಟಡ 


ಇದು ಶುರುವಾಗುವುದು ಅಂದಿನ ಪಶ್ಚಿಮ ಜರ್ಮನಿ ಆಯೋಜಿಸಿದ 1972 ಒಲಿಂಪಿಕ್ನಿಂದ . ಒಲಿಂಪಿಕ್ಗೆ ಭಾಗವಹಿಸಲು ಪ್ರಪಂಚದ ಎಲ್ಲ ದೇಶಗಳು ತಮ್ಮ ತಂಡಗಳನ್ನು ಕಳುಹಿಸಿ ಕೊಟ್ಟಂತೆ ಇಸ್ರೇಲ್ ತನ್ನ 28 ಕ್ರೀಡಾಪಟುಗಳ  ತಂಡವೊಂದನ್ನು ಕಳುಹಿಸಿಕೊಟ್ಟಿತ್ತು. ಹಾಗೆಯೇ ಅಂದು ಸ್ವಾತಂತ್ರಕ್ಕಾಗಿ ಹೋರಾಡುತ್ತಿದ್ದ ಪಾಲೆಸ್ಟಿನ್ ಲಿಬರೇಷನ್ ಆರ್ಗನ್ಯೆಜೆಷನ್ (ಪಿ.ಎ ಲ್.ಓ) ತನ್ನ 8 ಜನರ ತಂಡವೊಂದನ್ನು ಕಳುಹಿಸಿಕೊಟ್ಟಿತ್ತು  ಕ್ರೀಡಾಪಟುಗಳನಲ್ಲ!!!.  ಬದಲಾಗಿ ಬ್ಲಾಕ್ ಸೆಪ್ಟೆಂಬರ್ ಎಂದು ಕರೆಯಲ್ಪಡುವ ಉಗ್ರಗಾಮಿ ಸಂಘಟನೆಯೊಂದರ ಆತ್ಮಾಹುತಿ ದಳದ ಸದಸ್ಯರನ್ನು . ಮೇ 8 ,1972 ರಲ್ಲಿ ಟೆಲ್ಅವಿಲ್ ನಲ್ಲಿ  ಸಬಿನಾ ಫ್ಲೈಟ್- 571ರ ಹೈಜಾಕ್ ಮಾಡಿದ್ದ ಈ ಸಂಘಟನೆ ಈಗ ಇನ್ನೊಂದು ಕೃತ್ಯಕ್ಕೆ ಕೈಹಾಕಿತ್ತು . ತಮಗೆ ಬೇಕಾದ ರಹಸ್ಯ ಮಾಹಿತಿಗಳು , ಶಸ್ತ್ರಾಸ್ತ್ರ ಮೊದಲಾದ ಅಗತ್ಯಗಳನ್ನು ಪೂರೈಸಲು ಇವರು ಸಂಪರ್ಕಿಸಿದ್ದು , R.A.F (ರೆಡ್ ಆರ್ಮಿ ಫಾಶನ್) ಎನ್ನುವ ಜರ್ಮನಿ ಉಗ್ರಗಾಮಿ ಸಂಘಟನೆಯನ್ನು.  

ಘಟನೆ ಆರಂಭವಾದದ್ದು ಸೆಪ್ಟೆಂಬರ್ 4, 1972 ರ ಸಂಜೆ ಸಮಯ ಸುಮಾರು 4.40 ಕ್ಕೆ  ;

ಶಸ್ತ್ರಸಜ್ಜಿತ 8 ಮಂದಿ ಬ್ಲಾಕ್ ಸೆಪ್ಟೆಂಬರ್ ನ ಉಗ್ರರು ಮ್ಯೂನಿಚ್ ಕ್ರೀಡಾಗ್ರಾಮದ ಕಟ್ಟಡವೊಂದರ ಕೊಠಡಿಯಲ್ಲಿದ್ದ ಇಸ್ರೇಲ್ ಕ್ರೀಡಾಳುಗಳತ್ತ ಹತ್ತಿ ಹೋದರು . 11ಜನರ  ಇಸ್ರೇಲ್ ತಂಡವನ್ನು ಒತ್ತೆಯಾಳುಗಳಾಗಿ ಮಾಡಿಕೊಂಡರು. ಆರಂಭದ  ಅಕ್ರಮಣದಲ್ಲೇ ಇಬ್ಬರು ಇಸ್ರೇಲ್ ಸದಸ್ಯರು ಹತ್ಯೆಯಾದರು.  ಸ್ವಲ್ಪ ಹೊತ್ತಿನಲ್ಲೇ ಸುದ್ದಿ ಹಬ್ಬಿತ್ತು , ಉಳಿದವರು ಕಟ್ಟಡ ಬಿಟ್ಟು ದೂರ ಸರಿದರು. ಸುದ್ದಿ ಇಸ್ರೇಲ್ಗೆ ಮುಟ್ಟಲು ತಡವಾಗಲಿಲ್ಲ , ಆಗ ಇಸ್ರೇಲ್ ಪ್ರಧಾನಿಯಾಗಿದ್ದವರು ಗೋಲ್ಡಾ ಮೆಯ್ರ್. ಉನ್ನತ ಮಟ್ಟದ ಸಭೆಗಳು ನಡೆದು ಇಸ್ರೇಲಿ ಬೇಹುಗಾರಿಕೆ ಸಂಸ್ಥೆ ಮೋಸ್ಸಾದ್ ನ ಅಧಿಕಾರಿಗಳು  ಜರ್ಮನ್ನತ್ತ ಧಾವಿಸಿದ್ದರು. ಉಗ್ರರ ಬೇಡಿಕೆಗಳನ್ನು ಕೇಳಲಾಯಿತು. ಇಸ್ರೇಲ್ ಜೈಲ್ನಲ್ಲಿರುವ 234 P.L.O ಹೋರಾಟಗಾರನ್ನು ಮತ್ತು "ರೆಡ್ ಆರ್ಮಿ ಫಾಶನ್ನ" ಸ್ಥಾಪಕರಾದ ಆಂಡ್ರೆಸ್ ಬಡೆರ್ ಮತ್ತು ಮಾಜಿ ಪತ್ರಕರ್ತೆ ಉಲ್ರಿಕೆ ಮೆಯ್ನೋಫ್ ಎಂಬ ಜರ್ಮನ್ ಪ್ರಜೆಗಳನ್ನು ಬಿಡುಗಡೆಗೊಳಿಸಬೇಕೆಂದು ಉಗ್ರರ ಬೇಡಿಕೆಯಾಗಿತ್ತು. ಇದರಲ್ಲಿ ಉಗ್ರರ ಮುಖಂಡ ಲತೀಫ್ ಅಫಿಫ್ (ಇಸ್ಸಾ) ನ 2 ಜನ ಸಹೋದರರು ಸೇರಿದ್ದರು.  ಕುಖ್ಯಾತ ಕೈದಿಗಳನ್ನು ಬಿಡುಗಡೆಗೊಳಿಸುವುದು  ಇಸ್ರೇಲ್ಗೆ ಯಾವುದೇ ಕಾರಣಕ್ಕೂ ಒಪ್ಪದ ವಿಚಾರವಾಗಿತ್ತು. ಜರ್ಮನ್ ಸರ್ಕಾರ ಉಗ್ರರಿಗೆ ಹಣದ ಆಮಿಷವೊಡ್ಡಿತ್ತು. ಉಗ್ರರು ಸೊಪ್ಪು ಹಾಕಲಿಲ್ಲ.

ಕಟ್ಟಡದಿಂದ ಉಗ್ರನೊಬ್ಬನ ಇಣುಕುನೋಟ

ಮರುದಿನ ರಾತ್ರಿ  ಉಗ್ರರು ತಮ್ಮನ್ನು ಕೈರೋಗೆ ಸಾಗಿಸಬೇಕೆಂದು ಹೊಸ ಬೇಡಿಕೆಯಿಟ್ಟರು. ಇದು ಜರ್ಮನ್ ಪೊಲೀಸರಿಗೆ ಒತ್ತೆಯಾಳುಗಳನ್ನು ಕಾಪಾಡಲು ಅವಕಾಶವೊಂದನ್ನು ಒದಗಿಸಿತು . ಅಂತೆಯೇ ಜರ್ಮನಿ ಒದಗಿಸಿದ  2 ಹೆಲಿಕಾಪ್ಟರ್ಗಳಲ್ಲಿ ಸಮೀಪದ ನ್ಯಾಟೋ  ವೈಮಾನಿಕನೆಲೆಯತ್ತ ಉಗ್ರರನ್ನು ಒತ್ತೆಯಾಳುಗಳ ಸಮೇತ ಸಾಗಿಸಿದ್ದರು. ಮ್ಯೂನಿಚ್ ನಗರ ಶಸಸ್ತ್ರದಳ ಪೊಲೀಸರು ವಿಮಾನನಿಲ್ದಾಣವನ್ನು ಸುತ್ತುವರಿದು ಕಾರ್ಯಾಚರಣೆಗೆ ತೊಡಗಿದ್ದರು. ಇವರು ಈ ತರಹದ ಕಾರ್ಯಾಚರಣೆಗೆಂದು ತರಬೇತುಗೊಂಡಿರಲಿಲ್ಲ. ಮತ್ತು ಇದಕ್ಕೆ ಬೇಕಾದ ಶಸ್ತ್ರಗಳನ್ನು ಹೊಂದಿರಲಿಲ್ಲ. ಅಲ್ಲದೆ ಉಗ್ರರ ಸಂಖ್ಯೆಯ ಬಗ್ಗೆ ಹೊಂದಿದ್ದ ಶಸ್ತ್ರಾಸ್ತ್ರಗಳ ಬಗ್ಗೆ ಖಚಿತ ಮಾಹಿತಿಯು  ಇರಲಿಲ್ಲ . ಇಸ್ರೇಲ್ನ ರಕ್ಷಣಾ ಪರಿಣಿತರು ಈ ಕಾರ್ಯಾಚರಣೆಯನ್ನು ಮೌನವಾಗಿ ವೀಕ್ಷಿಸುವಂತಾಯಿತು. ರಾತ್ರಿ 10.30 ರ ಸಮಯದಲ್ಲಿ ಹೆಲಿಕ್ಯಾಪ್ಟರ್ ನಿಲ್ದಾಣದಲ್ಲಿ ಇಳಿಯಿತು . ಮೊದಲೇ ರಹಸ್ಯ ಸ್ಥಳಗಳಲ್ಲಿ ಅವಿತಿದ್ದ  ಪೊಲೀಸರನ್ನು ಉಗ್ರರು ಕಂಡರು ,ಗುಂಡಿನ ಹೋರಾಟ ಶುರುವಾಯಿತು. ಒಬ್ಬ ಉಗ್ರ ಹೆಲಿಕಾಪ್ಟರ್ನಲ್ಲಿದ್ದ ಒತ್ತೆಯಾಳುಗಳತ್ತ ಗ್ರೆನೇಡ್ ಒಂದನ್ನು ಎಸೆದ. ಇನ್ನೊಬ್ಬ ಮತ್ತೊಂದು ಹೆಲಿಕಾಪ್ಟರ್ನಲ್ಲಿದ್ದವರತ್ತ ಗುಂಡು ಹಾರಿಸಿದ. ಪೊಲೀಸ್ ತಂಡದ ಶಾರ್ಪ್ ಶೂಟರ್ಗಳು ಉಗ್ರರನ್ನು ಬೇಟೆಯಾಡಿದ್ದರು.  ಮಧ್ಯರಾತ್ರಿ ವೇಳೆಗೆ ಕಾರ್ಯಾಚರಣೆ ಮುಕ್ತಾಯವಾಯಿತು. 2 ಹೆಲಿಕಾಪ್ಟರ್ಗಳಲ್ಲಿದ್ದ ಎಲ್ಲ 9 ಮಂದಿ ಕ್ರೀಡಾಪಟುಗಳು ಹತ್ಯೆಯಾಗಿದ್ದರು. ಪೊಲೀಸರ ಗುಂಡಿಗೆ 5 ಜನ ಉಗ್ರರು ಸಾವಿಗೀಡಾದರು. ಅಡಗಿದ್ದ 3 ಉಗ್ರರನ್ನು ಸೆರೆಹಿಡಿಯಲಾಯಿತು, ಓರ್ವ ಜರ್ಮನ್ ಪೊಲೀಸ್ ಪ್ರಾಣ ತ್ಯಜಿಸಿದ್ದರು. 

ಸುದ್ದಿ ಪ್ರಪಂಚದೆಲ್ಲೆಡೆ ಹರಡಿತು. ಒಂದು ಹಂತದಲ್ಲಿ ಒಲಿಂಪಿಕ್ ನಿಲ್ಲಿಸಲು ಯೋಜಿಸಿದ್ದರು, ಆದರೆ ಇಸ್ರೇಲ್ ಸರ್ಕಾರ ಮಧ್ಯ ಪ್ರವೇಶಿಸಿ ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕೆ ಒಲಿಂಪಿಕ್ ನ್ನು  ಯಶಸ್ವಿಯಾಗಿ ನಡೆಸಬೇಕೆಂದು ಹೇಳಿತು. ಕರಿಛಾಯೆಯ ನಡುವೆ ಕ್ರೀಡಾಕೂಟ ನಡೆಯಿತು. ಪೂರ್ಣ ಇಸ್ರೇಲ್ ತಂಡ ,ತಮ್ಮ ಮೃತಪಟ್ಟ ಸದಸ್ಯರೊಂದಿಗೆ ಇಸ್ರೇಲ್ಗೆ ಬಂದಿಳಿಯಿತು. ರಾಷ್ಟ್ರೀಯ  ಶೋಕದ ನಡುವೆ ಅಂತಿಮ ಸಂಸ್ಕಾರ ಕಾರ್ಯಗಳು ನಡೆದವು. ಇನ್ನು ಮೃತರಾದ 5 ಮಂದಿ ಉಗ್ರರ ಶವಗಳು ಲಿಬಿಯದತ್ತ ರವಾನೆಯಾದವು. ಅಲ್ಲಿ ಅವರಿಗೆ ಮಿಲಿಟರಿ ನಮನದೊಂದಿಗೆ ಅಂತಿಮ ವಿಧಿಗಳು ನಡೆದವು. ಏಕೆಂದರೆ ಲಿಬಿಯಾ ಸರ್ವಾಧಿಕಾರಿ ಮಮ್ಮರ್ ಗಢಾಫಿ ಪ್ರಕಾರ ಈ  ಉಗ್ರರು ಅಲ್ಲಿನ ಹೀರೋಗಳಾಗಿದ್ದರು.

ಈ ಹತ್ಯಾಕಾಂಡವು ಜರ್ಮನಿಯಲ್ಲಿ ಹಿಟ್ಲರ್ ಮಾಡಿದ ಯಹೂದಿ ಹತ್ಯೆಯ ದಿನಗಳನ್ನು ನೆನಪಿಗೆ ತಂದಿತು. ಯಹೂದಿ ದೇಶ
ಇಸ್ರೇಲ್ನಲ್ಲಿ ಪ್ರತಿಕಾರದ ಕೂಗೆದಿತ್ತು. ಮರುದಿನ ಇಸ್ರೇಲ್ ವಿಮಾನಗಳು ಲೆಬನಾನ್ ಮತ್ತು ಸಿರಿಯಾದಲ್ಲಿದ್ದ ಪ್ಯಾಲೆಸ್ತೀನ್ ನಿರಾಶ್ರೀತರ ಶಿಬಿರಗಳ ಮೇಲೆ ಬಾಂಬ್ ಧಾಳಿ ಶುರುಮಾಡಿದವು. 200 ಮಂದಿ ಅಮಾಯಕರು ಬಲಿಯಾದರು . ಇಸ್ರೇಲ್ ತಪ್ಪಿತಸ್ಥರಿಗೆ ಶಿಕ್ಷೆಯುಂಟಾಗಲು ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿತ್ತು . ಪ್ರಧಾನಿ ಗೋಲ್ಡಾ ಮೆಯ್ರ್ , ರಕ್ಷಣಾ ಸಚಿವ ಮೋಶೆ ಡಯನ್ , ಮೋಸ್ಸಾದ್ ಮುಖ್ಯಸ್ಥ  ಜ್ವಿ ಝಮೀರ್ , ರಕ್ಷಣಾ ಸಲಹೆಗಾರ ಅರೋನ್ ಯರೀವ್   ಮೊದಲಾದವರು ಸೇರಿ ಒಂದು ಸಮಾಲೋಚನೆ ನಡೆಯಿತು . ಕಮಿಟಿ -X  ಎನ್ನುವ ಹೊಸ ತಂಡ ರಚನೆಯಾಯಿತು.

ಈ ಮಧ್ಯೆ  20 ನೇ ಅಕ್ಟೋಬರ್ 1972ರಂದು  ಲುಫ್ತಾನ್ಸ ಫ್ಲೈಟ್ -615  ಎಂಬ ಡಮಾಸ್ಕಸ್ ನಿಂದ ಫ್ರಾಂಕ್ಫ಼ರ್ಟ್ ಗೆ ತೆರಳುತ್ತಿದ್ದ ಪ್ರಯಾಣಿಕ ವಿಮಾನ ಅಪಹರಣವಾಯಿತು. ವಿವಿಧ ದೇಶಗಳ 13 ಪ್ರಯಾಣಿಕರು ಇದ್ದ ವಿಮಾನವನ್ನು ಮತ್ತೆ ಬ್ಲಾಕ್ ಸೆಪ್ಟೆಂಬರ್ ತಂಡದ ಇಬ್ಬರು ಅಪಹರಿಸಿದ್ದರು. ಅವರ ಬೇಡಿಕೆ ಏನೆಂದರೆ ಮ್ಯೂನೀಚ್ ಧಾಳಿಯಲ್ಲಿ ಬಂಧಿತರಾದ ಅದ್ನಾನ್ -ಅಲ್ -ಘಾಸಿ , ಜಮಾಲ್-ಅಲ್-ಘಾಸಿ  ಮತ್ತು ಮೊಹಮ್ಮದ್ ಸಫಾದಿ ಯರನ್ನು ಜೈಲಿಂದ ಬಿಡುಗಡೆಗೊಳಿಸುವುದು . ಅಂತಾರಾಷ್ಟ್ರೀಯ ಸಮುದಾಯದ ಒತ್ತಡದ ನಂತರ ಜರ್ಮನಿ ಇದಕ್ಕೆ ಒಪ್ಪಿತ್ತು. ಲಿಬಿಯಾದ ಟ್ರಿಪೋಲಿಯಲ್ಲಿ ಅಪಹರಣಕಾರರು ಮತ್ತು ಮ್ಯೂನಿಚ್  ಹತ್ಯಾಕಾಂಡದ ಆರೋಪಿಗಳು ಬಂದಿಳಿದಾಗ ಭವ್ಯ ಸ್ವಾಗತ ದೊರಕಿತು. ಅಂದು ಅವರು  ಮಾಡಿದ ಪತ್ರಿಕಾಗೋಷ್ಠಿ ವಿಶ್ವದಾದ್ಯಂತ ಪ್ರಸಾರವಾಯಿತು. ಅಲ್ಲಿಗೆ ಇಸ್ರೇಲ್ನ ಪ್ರತಿಷ್ಠೆಗೆ ಭಂಗವುಂಟಾಯಿತು.

ಭಾರತವು ಕೂಡ ಇಂತಹ ಸಂದರ್ಭವನ್ನು ಕಂದಹಾರ್ ವಿಮಾನ ಅಪಹರಣದಲ್ಲಿ ಕಂಡಿತ್ತು.ಭಾರತ ಉಗ್ರರ ಬೇಡಿಕೆಯನ್ನು ಒಪ್ಪಿ ಒತ್ತೆಯಾಳುಗಳನ್ನು ಬಿಡಿಸಿಕೊಂಡಿತು. ನಂತರ ಅಪಹರಣಕಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬಿಡುಗಡೆಯಾದ ಉಗ್ರರು ಮತ್ತೆ ಭಾರತಕ್ಕೆ ಗಂಡಾಂತರಕಾರಿಯಾಗಿ ಪರಿಣಮಿಸಿದರು.  ಆದರೆ ಇಲ್ಲಿ ಇಸ್ರೇಲ್ ಇದಕ್ಕೆ ಪ್ರತಿಕಾರ ತೆಗೆದುಕೊಳ್ಳುವ ಪ್ರತಿಜ್ಞೆ ಮಾಡಿತ್ತು ಮತ್ತು ಸಾಧಿಸಿತು. ಘಟನೆಗೆ ಕಾರಣರಾದವರನ್ನು ಹುಡುಕಿ ಜಗತ್ತಿಗೆ ಸುಳಿವು ಸಿಗದಂತೆ  ಯಮಲೋಕಕ್ಕೆ ಅಟ್ಟಿತ್ತು. ವ್ರಾತ್ ಆಫ್ ಗಾಡ್ ಎಂದು ಕರೆಯಲ್ಪಡುವ ಈ ಸಾಹಸ ಕತೆಯನ್ನು ಇನ್ನೊಂದು ಭಾಗದಲ್ಲಿ ನೋಡೋಣ.

                                                                                                                -Tharanatha Sona



ಮಾಹಿತಿ ಮತ್ತು ಚಿತ್ರಕೃಪೆ :- ಅಂತರ್ಜಾಲ